Sunday, March 26, 2017

ನಾ ಕಂಡಂತೆ ಸ್ವಾಮಿ ಪುರುಷೋತ್ತಮಾನಂದ

೧೯೯೦-೯೧ರಲ್ಲಿ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿದ್ದೆ. ಕುಣಿಗಲ್‌ನ ವಿವೇಕಾನಂದ ವಿಚಾರವೇದಿಕೆಯವರು ಸ್ವಾಮಿ ಪುರುಷೋತ್ತಮಾನಂದ ಅವರ ‘ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ’ಯ ಎರಡನೆಯ ಸಂಪುಟವಾದ ‘ವೀರಸಂನ್ಯಾಸಿ ವಿವೇಕಾನಂದ’ ಕೃತಿಯ ಮೊದಲ ೧೩ ಅಧ್ಯಾಯಗಳನ್ನು ನಿಗದಿಪಡಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ಪರೀಕ್ಷೆಯನ್ನು ಏರ್ಪಡಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಗಿರಿಗೌಡರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳವಂತೆ ಹೇಳಿ ಯಾರಿಗಾದರೂ ಪುಸ್ತಕ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ತಾವು ಪುಸ್ತಕವನ್ನು ಕೊಡುವುದಾಗಿ ತಿಳಿಸಿದರು. ನಾನು ಪುಸ್ತಕವನ್ನು ಕೊಂಡುಕೊಳ್ಳುವ ಸ್ಥಿತಿಯಲ್ಲಿಲ್ಲದ ಕಾರಣ ಅವರ ಕೊಠಡಿಗೆ ಹೋಗಿ ನನಗೆ ಪುಸ್ತಕ ಬೇಕೆಂದು ಕೇಳಿದೆ. ಮರುಕ್ಷಣದಲ್ಲಿಯೇ ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕೈಗಿತ್ತರು. (ಇನ್ನೊಮ್ಮೆ ಸ್ವಾಮೀಜಿಯವರು ಬರೆದಿದ್ದ ‘ವಿದ್ಯಾರ್ಥಿಗೊಂದು ಪತ್ರ’ ಎಂಬ ಪುಟ್ಟ ಪುಸ್ತಕವನ್ನು ಗಿರಿಗೌಡರು ಓದುತ್ತಿದ್ದರು. ಅದೇ ಸಮಯಕ್ಕೆ ನಾನು ದಿನಪತ್ರಿಕೆ ತೆಗೆದುಕೊಳ್ಳಲೆಂದು ಹೋದೆ. ಶ್ರೀ ಗಿರಿಗೌಡರು ತಾವು ಓದುತ್ತಿದ್ದ ಪುಸ್ತಕವನ್ನು ನನ್ನ ಕೈಗಿತ್ತು “ಈ ಪುಸ್ತಕವನ್ನು ಓದು” ಅಂದರು.) ಆ ಪುಸ್ತಕದ ಮೊದಲ ಪುಟವನ್ನು ಓದುತ್ತಿದ್ದಂತೆಯೇ ನನಗೆ ಬೇರೊಂದು ಪ್ರಪಂಚವೇ ತೆರೆದುಕೊಂಡಂತಾಯಿತು. ಪುರುಷೋತ್ತಮಾನಂದಜಿಯವರ ಭವ್ಯವಾದ ಶೈಲಿ ನನ್ನನ್ನು ಆಕರ್ಷಿಸಿತು. ಪುಸ್ತಕವನ್ನು ನಾಲ್ಕು ಬಾರಿ ಓದಿದೆ. ಜೊತೆಗೆ ನೋಟ್ಸ್ ಮಾಡಿದೆ ಕೂಡ. ಯಾವ ಪದ ಯಾವ ಪುಟದಲ್ಲಿದೆ ಎಂಬುದು ನನಗೆ ಗೊತ್ತಿತ್ತು. ಪರೀಕ್ಷೆಯಲ್ಲಿ ಸಮಯದ ಅಭಾವದಿಂದ ಕೊನೆಯ ಪ್ರಶ್ನೆಯನ್ನು ಪೂರ್ಣವಾಗಿ ಉತ್ತರಿಸಲಾಗಲಿಲ್ಲ. ಪರೀಕ್ಷೆಯ ಮಾರನೇ ದಿನ ಪುಸ್ತಕವನ್ನು ಮುಖ್ಯೋಪಾಧ್ಯಾಯರಿಗೆ ಹಿಂದಿರುಗಿಸಿದೆ.

ಒಂದು ದಿನ ವಿದ್ಯಾರ್ಥಿಗಳೆಲ್ಲ ಶಾಲೆ ಮುಗಿಸಿ ಮನೆಯ ಕಡೆ ಹೋಗುತ್ತಿದ್ದೆವು. ಆಗ ತಾನೇ ಬೆಲ್ ಹೊಡೆದಿತ್ತು. ಇನ್ನೂ ಶಾಲಾ ಮೈದಾನದಲ್ಲೇ ಇದ್ದೆವು. ಹಿಂದಿನಿಂದ ಯಾರೋ ಸ್ಕೂಟರಿನಲ್ಲಿ ಬಂದು "ಜ್ಞಾನೇಶ್ವರ ಯಾರು?" ಎಂದು ಕೇಳಿದರು. ಹಿಂದಿರುಗಿ ನೋಡಿದರೆ ವಿವೇಕಾನಂದ ವಿಚಾರವೇದಿಕೆಯ ಅಧ್ಯಕ್ಷರಾದ ಶಂಕರರಾಮಯ್ಯನವರು! (ಈಗ ‘ಸ್ವಾಮಿ ವೀರೇಶಾನಂದ’ ಎಂಬ ಅಭಿಧಾನದಿಂದ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿದ್ದಾರೆ.) “ನೀನು ವಿಶ್ವವಿಜೇತ ವಿವೇಕಾನಂದ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ಬಂದಿದ್ದಿ ಕಣಯ್ಯಾ!” ಎಂದು ಹೇಳಿದರು. ಆಗ ನಾನು ನೆಲದ ಮೇಲಿರಲಿಲ್ಲ!

ಕುಣಿಗಲ್‌ನಲ್ಲಿ ಬಹುಮಾನ ವಿತರಣಾ ಸಮಾರಂಭ ಏರ್ಪಾಡಾಯಿತು. ನನಗೂ ಒಂದು ಆಹ್ವಾನ ಪತ್ರಿಕೆ ನೀಡಲಾಯಿತು. ಸ್ವತಃ ಸ್ವಾಮಿ ಪುರುಷೋತ್ತಮಾನಂದರೇ ಬಹುಮಾನ ವಿತರಿಸಲು ಬಂದಿದ್ದರು. ಜಿ.ಕೆ.ಬಿ.ಎಂ.ಎಸ್. ಶಾಲೆಯ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭವಾಗಬೇಕಿದ್ದ ಸಮಯಕ್ಕೆ ಸಮಾರಂಭದಲ್ಲಿ ಕೆಲವೇ ಜನರಿದ್ದರು. ಪುರುಷೋತ್ತಮಾನಂದಜಿಯವರು ಕೋಲಾಟವನ್ನು ಆರಂಭಿಸಲು ಅಪ್ಪಣೆ ಕೊಡಿಸಿದರು. ತಡವಾಗಿ ಬಂದವರಿಗೆ ಕೋಲಾಟವನ್ನು ನೋಡುವ ಅವಕಾಶವನ್ನು ಕಳೆದುಕೊಂಡೆವೆಂದು ಪಶ್ಚಾತ್ತಾಪವಾಗಬೇಕು. ಇನ್ನೊಮ್ಮೆ ತಡವಾಗಿ ಬರದಿರಲು ಇದೊಂದು ಪಾಠವಾಗಬೇಕೆಂಬುದು ಪುರುಷೋತ್ತಮಾನಂದಜಿಯವರ ಎಣಿಕೆ. ಬೆಂಗಳೂರಿನ ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘದ ಮಕ್ಕಳು ಕೋಲಾಟ ನಡೆಸಿಕೊಟ್ಟರು. ಸ್ವಾಮೀಜಿಯವರ ಹಾಡಿಗೆ ಮಕ್ಕಳು ಕೋಲಾಟ ಪ್ರದರ್ಶಿಸಿದರು. ಅದೊಂದು ಅಪೂರ್ವ ಕಾರ್ಯಕ್ರಮ. ಅಂಥ ಕೋಲಾಟವನ್ನು ನಾನು ಬೇರೆಲ್ಲೂ ನೋಡಿಲ್ಲ. ಸ್ವಾಮೀಜಿಯವರು ಅಂದು ಹಾಡಿದ “ನಂದ ಲಾಲಿ ಗೋಪಿ ಕಂದ ಲಾಲಿ” ಎಂಬ ಹಾಡು ನನಗೆ ಇಂದಿಗೂ ನೆನಪಿದೆ. ಸ್ವಾಮೀಜಿ ಮಾತು ಆರಂಭಿಸಿದರು. “ಇಲ್ಲಿ ಸ್ವಾಮಿಗಳೊಬ್ಬರು ಮಾತಾಡ್ತಾ ಇದ್ದಾರೆ. ಅಲ್ಲಿ ಯಾರೋ ಬೀಡಿ ಸೇದ್ತಾ ಇದ್ದಾನೆ” ಎಂದರು. ಜನರೆಲ್ಲ ಹಿಂದೆ ತಿರುಗಿದರು. “ಆರಿಸಿಬಿಟ್ಟ ಬಿಡಿ” ಎಂದರು. ಮಾತು ಮುಂದುವರಿಸುತ್ತಾ, “ಕುಣಿಗಲ್‌ನಲ್ಲಿ ಕುದುರೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಲದು; ಮನುಷ್ಯರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು” ಎಂದರು. ಕಾರ್ಯಕ್ರಮಕ್ಕೆ ಮಂಚೆ ಅವರನ್ನು ಕುದುರೆ ಫಾರಂಗೆ ಕರೆದುಕೊಂಡು ಹೋಗಿ ತೋರಿಸಲಾಗಿತ್ತು. ನಂತರ ತಮ್ಮ ಮೂವರು ಪುತ್ರರನ್ನು ಸಮಾಜಸೇವೆಗೆ ಸಮರ್ಪಿಸಿದ ಶಂಕರರಾಮಯ್ಯನವರ ತಂದೆತಾಯಿಗಳನ್ನು ಸ್ವಾಮೀಜಿಯವರು ಸನ್ಮಾನಿಸಿದರು.

ಕೆಲವು ದಿನಗಳ ನಂತರ ಹೆಬ್ಬೂರಿನ ವಿಪ್ರ ಶಿಕ್ಷಣ ಸಂಸ್ಥೆಯವರು ಸ್ವಾಮಿ ಪುರುಷೋತ್ತಮಾನಂದಜಿಯವರನ್ನು ಕರೆಸುವವರಿದ್ದರು. ನನಗೆ ಆಹ್ವಾನ ಬಂದಿತು. ವಿಪ್ರ ಶಿಕ್ಷಣ ಸಂಸ್ಥೆಯ ನಾಗರಾಜ್ ಅವರ ಮನೆಯಲ್ಲಿ ಸ್ವಾಮೀಜಿಯವರು ಕುರ್ಚಿಯ ಮೇಲೆ ಕುಳಿತಿದ್ದರು. ನನ್ನನ್ನು ಸ್ವಾಮೀಜಿಯವರ ಪಕ್ಕ ನಿಂತುಕೊಳ್ಳಲು ಹೇಳಿದರು. ಇನ್ನೊಂದು ಪಕ್ಕ ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದ ಹೆಬ್ಬೂರಿನ ಶೈಲಾ ಹಾಗೂ ವಿಪ್ರ ಶಿಕ್ಷಣ ಸಂಸ್ಥೆಯ ಪ್ರಭು ನಿಂತಿದ್ದರು. ಸ್ವಾಮೀಜಿ ತಮ್ಮ ಅಂಗಿಯ ತೋಳನ್ನು ಮಡಿಸಿಕೊಳ್ಳುತ್ತಿರುವಾಗಲೇ ಯಾರೋ ಫೋಟೋ ತೆಗೆದರು. “ಎಂಥ ಫೋಟೋಗ್ರಾಫರಯ್ಯಾ ನೀನು?” ಎಂದು ಸ್ವಾಮೀಜಿ ಛೇಡಿಸಿದರು. ಆಗ ಯೋಗ ಕಲಿಸುವವರೊಬ್ಬರು ಅಲ್ಲಿಗೆ ಬಂದರು. ಒಂದು ಫೈಲ್ ತೋರಿಸಿದರು. ಆಗ ಸ್ವಾಮೀಜಿ “ನನಗೆ ಫೈಲ್ ಬೇಡ. ಯೋಗ ಕಲಿತಿರುವವರನ್ನು ಕರೆಯಿರಿ. ಯೋಗ ಕಲಿತವರ ಮುಖದಲ್ಲಿ ವಿಶೇಷ ಕಳೆ ಇರಬೇಕು” ಎಂದರು. ನಂತರ ಕೋದಂಡಾಶ್ರಮ ಮಠಕ್ಕೆ ಹೋದೆವು. ಅಲ್ಲಿ ಒಬ್ಬರನ್ನು ಸ್ವಾಮೀಜಿಗೆ ಪರಿಚಯಿಸುತ್ತಾ “ಇವರು ‘ಕನ್ನಡ ಕಾಜಾಣ’ ಎಂಬ ಪುಸ್ತಕ ಬರೆದಿದ್ದಾರೆ” ಎಂದು ಅಲ್ಲಿದ್ದವರೊಬ್ಬರು ಹೇಳಿದರು. ಸ್ವಾಮೀಜಿಯವರು “ಕನ್ನಡ ಕಾ ಜಾಣ” ಎಂದು ಹೇಳಿ ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆದರು. ಸ್ವಾಮೀಜಿಯವರು ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆ ತೆಗೆದುಕೊಂಡಿದ್ದವರಿಗೆ ‘ವಿಶ್ವವಿಜೇತ ವಿವೇಕಾನಂದ’ ಕೃತಿಯ ಮುಖಪುಟದಲ್ಲಿದ್ದ ವಿವೇಕಾನಂದರ ಚಿತ್ರವನ್ನು ವಿತರಿಸಿದರು. ನಾನೂ ಒಂದನ್ನು ಪಡೆದುಕೊಂಡೆ. ಅದನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸಿ ಇಟ್ಟಿದ್ದೇನೆ.

ಪುರುಷೋತ್ತಮಾನಂದಜಿಯವರು ಇನ್ನೊಮ್ಮೆ ಕುಣಿಗಲ್‌ಗೆ ಬಂದಾಗ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಭಜನೆ ಪ್ರವಚನ ನಡೆಸಿಕೊಟ್ಟರು. “ಪರಬ್ರಹ್ಮನು ಒಬ್ಬನೇ ಇರುವುದು ಬೇಸರವೆಂಬ ಕಾರಣಕ್ಕೆ ಪ್ರಪಂಚವನ್ನು ಸೃಷ್ಟಿಸಿದನು” ಎಂದು ಹೇಳಿದರು. ಸ್ವಾಮೀಜಿಯವರ ಕಂಠ ತುಂಬ ಮಧುರವಾಗಿತ್ತು. ಶಂಕರರಾಮಯ್ಯನವರ ಮಾತಿನಲ್ಲಿ ಹೇಳುವುದಾದರೆ ‘ದೇವದುರ್ಲಭ ಕಂಠ’.

ಮುಂದಿನ ವರ್ಷ ಶಂಕರರಾಮಯ್ಯನವರು ತುಮಕೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವಿವೇಕಾನಂದ ವಿಚಾರವೇದಿಕೆಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದರು. ನಾನು ತುಮಕೂರಿನಲ್ಲಿ ಡಿಪ್ಲೊಮಾ ವ್ಯಾಸಂಗಕ್ಕೆ ಸೇರಿದ್ದರಿಂದ ಅವರ ಸಂಪರ್ಕದಲ್ಲಿದ್ದೆ. ಆ ವರ್ಷ ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಯಿತು. ನಾನು ಈ ಬಾರಿ ಕಾಲೇಜು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದೆ.

ಒಮ್ಮೆ ಪುರುಷೋತ್ತಮಾನಂದಜಿಯವರು ತುಮಕೂರಿನ ಒಬ್ಬರ ಮನೆಗೆ ಭೇಟಿ ನೀಡಿದ್ದರು. ಆ ಮನೆಯ ಮಹಿಳೆ ಒಬ್ಬ ಮಗ ಮನೆ ಬಿಟ್ಟು ಹೋಗಿರುವುದಾಗಿ ಹೇಳಿ ತಮ್ಮ ಗೋಳು ತೋಡಿಕೊಂಡರು. ಸ್ವಾಮೀಜಿ “ಹೋದ ಮಗನಿಗಾಗಿ ಅಳುತ್ತಿದ್ದೀರಿ. ಇರುವ ಮಗನಿಗಾಗಿ ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.

ಒಮ್ಮೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯವರು ಹಾಡಿದ “ವಿದುರನ ಭಾಗ್ಯವಿದು” ಎಂಬ ಹಾಡು ನನ್ನನ್ನು ಬಹುವಾಗಿ ಆಕರ್ಷಿಸಿತು.

ಒಮ್ಮೆ ಶಂಕರರಾಮಯ್ಯನವರೊಂದಿಗೆ ಬೆಂಗಳೂರಿನ ರಾಮಕೃಷ್ಣಾಶ್ರಮಕ್ಕೆ ಹೋಗಿದ್ದೆ. ಸ್ವಾಮೀಜಿಯವರಿಗೆ “ಇವನ ಹೆಸರು ಜ್ಞಾನೇಶ್ವರ” ಎಂದು ನನ್ನನ್ನು ಪರಿಚಯಿಸಿದಾಗ “ಸಂತ್ ಜ್ಞಾನೇಶ್ವರ್ ಫಿಲ್ಮ್ ಇದೆ ನಮ್ಮಲ್ಲಿ” ಎಂದರು. ಅಂದು ಸಂಜೆ ಆಶ್ರಮದಲ್ಲಿ ಸ್ವಾಮೀಜಿಯವರ ಭಜನೆ ಕೇಳಿದೆ. ಭಜನೆಯ ನಂತರ ಮರುದಿನ ನರಸಿಂಹ ಬೆಟ್ಟದಲ್ಲಿ ಸತ್ಸಂಗ ಕಾರ್ಯಕ್ರಮವಿರುವುದಾಗಿ ಪ್ರಕಟಿಸಿ ಆಸಕ್ತರು ಸೀಟು ಕಾದಿರಿಸಿ ಎಂದರು. ಸೀಟು ಸಿಗದಿದ್ದವರು ಮನೆಗೆ ಹೋಗಿ ಕಾಫಿ ಕುಡಿಯಿರಿ ಎಂದು ಹೇಳಿ ತಮ್ಮ ಹಾಸ್ಯಪ್ರಜ್ಞೆಯನ್ನು ಪ್ರದರ್ಶಿಸಿದರು. ನರಸಿಂಹ ಬೆಟ್ಟದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ನನ್ನ ಜೀವನದಲ್ಲಿ ಮರೆಯಲಾರದ ಘಟನೆಯದು. ಅಂದು ಅನುಭವಿಸಿದ ಆನಂದವನ್ನು ಮತ್ತೆಂದೂ ಅನುಭವಿಸಿಲ್ಲ.

ನಾನು ಸ್ವಾಮೀಜಿಯವರ ‘ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ’ಯ ಮೂರೂ ಸಂಪುಟಗಳನ್ನು ಓದಿರುವುದಲ್ಲದೆ ಅವರ ಅನೇಕ ಕಿರುಹೊತ್ತಗೆಗಳನ್ನು ಓದಿದ್ದೇನೆ. ಅವರ ‘ಮಿಂಚಿನ ಗೊಂಚಲು’ ನನ್ನ ಮೇಲೆ ಮೋಡಿ ಮಾಡಿತ್ತು. ಒಮ್ಮೆ ‘ತರಂಗ’ದಲ್ಲಿ ‘ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕ’ ಎಂಬ ಲೇಖನ ಬರೆದಿದ್ದರು. ಇನ್ನೊಮ್ಮೆ ಅದೇ ಪತ್ರಿಕೆಯಲ್ಲಿ ‘ಮಂದಹಾಸವೇ ಅಂದ’ ಎಂಬ ಪುಟ್ಟಲೇಖನ ಬರೆದಿದ್ದರು. 
-ತ. ನಂ. ಜ್ಞಾನೇಶ್ವರ

No comments:

Post a Comment