Sunday, July 17, 2016

ನನ್ನ ವೃತ್ತಿಜೀವನದ ನೆನಪುಗಳು




ನಾನು ಇತ್ತೀಚೆಗೆ ‘ನನ್ನ ವೃತ್ತಿಜೀವನದ ನೆನಪುಗಳು’ ಕೃತಿಯನ್ನು ಓದಿದೆ. ಸರ್ ಎಂ ವಿಶ್ವೇಶ್ವರಯ್ಯನವರ ‘Memoirs of My Working Life’ ಕೃತಿಯನ್ನು ವೃತ್ತಿಯಿಂದ ಇಂಜಿನಿಯರ್ ಆಗಿರುವ ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ತಂದಿದ್ದಾರೆ. ಆತ್ಮಕಥಾ ಸ್ವರೂಪದ ಈ ಕೃತಿಯಲ್ಲಿ ವಿಶ್ವೇಶ್ವರಯ್ಯನವರು ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ದಾಖಲಿಸದೆ ತಾವು ಇಂಜಿನಿಯರ್ ಆಗಿ ಹಾಗೂ ಮೈಸೂರಿನ ದಿವಾನರಾಗಿ ಕೈಗೊಂಡ ಕಾರ್ಯಗಳನ್ನು ವಿವರಿಸಿದ್ದಾರೆ. ಅಲ್ಲಲ್ಲಿ ಪತ್ರಗಳನ್ನೂ, ಭಾಷಣಗಳನ್ನೂ, ಪತ್ರಿಕಾ ವರದಿಗಳನ್ನೂ ಉಲ್ಲೇಖಿಸುತ್ತಾರೆ. ಕೃತಿಯು 19 ಅಧ್ಯಾಯಗಳನ್ನು ಹೊಂದಿದ್ದು, 7ನೆಯ ಅಧ್ಯಾಯದಲ್ಲಿ ತಾವು ದಿವಾನ ಹುದ್ದೆಯನ್ನು ಅಲಂಕರಿಸಿದಾಗ ಇದ್ದ ಮೈಸೂರಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ. 8ನೆಯ ಅಧ್ಯಾಯದಲ್ಲಿ ಪ್ರಜಾಪ್ರತಿನಿಧಿ ಸಭೆ ಹಾಗೂ ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಪ್ರಾಪ್ತವಾಗುವಲ್ಲಿ ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ. ಪುಟ 107 ಹಾಗೂ 108ರಲ್ಲಿ ತಾವು ದಿವಾನ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸುತ್ತಾರೆ. 14ನೆಯ ಅಧ್ಯಾಯದಲ್ಲಿ ತಾವು ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ವಿವಿಧ ಸಮಿತಿಗಳ ಬಗ್ಗೆ ವಿವರಿಸುತ್ತಾರೆ. 15ನೆಯ ಅಧ್ಯಾಯದಲ್ಲಿ ತಾವು ಭಾಗವಹಿಸಿದ ರಾಜಕೀಯ ಸಮ್ಮೇಳನಗಳ ಬಗ್ಗೆ ಬರೆಯುತ್ತಾರೆ. 16ನೆಯ ಅಧ್ಯಾಯದಲ್ಲಿ ತಮ್ಮ ವಿದೇಶ ಪ್ರವಾಸಗಳ ಬಗ್ಗೆ ವಿವರಿಸುತ್ತಾರೆ. ಅವರು ಆರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಅವು ಮೋಜಿನ ಪ್ರವಾಸಗಳಾಗಿರದೆ ಅಧ್ಯಯನ ಪ್ರವಾಸಗಳಾಗಿದ್ದವು. ತಮ್ಮ ಮೂರನೆಯ ವಿದೇಶ ಪ್ರವಾಸದಲ್ಲಿ ಲಂಡನ್ನಿನಲ್ಲಿ ಹತ್ತು ತಿಂಗಳ ಕಾಲ ತಂಗಿ ‘ರಿಕನ್‍ಸ್ಟ್ರಕ್ಟಿಂಗ್ ಇಂಡಿಯಾ’ ಕೃತಿಯನ್ನು ರಚಿಸಿದುದನ್ನೂ, ಅಲ್ಲಿಯ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಅವರಿಗೆ ಅಗತ್ಯವಿದ್ದ ಮಾಹಿತಿಗಳು ಲಭ್ಯವಾಗುತ್ತಿದ್ದುದರಿಂದ ಆ ಕೃತಿಯನ್ನು ರಚಿಸಲು ಲಂಡನ್ ಸೂಕ್ತ ಸ್ಥಳವಾಗಿತ್ತೆಂದೂ ಬರೆಯುತ್ತಾರೆ. ಕೊನೆಯ ಮೂರು ಅಧ್ಯಾಯಗಳು ಅವರ ವೃತ್ತಿಜೀವನದ ನೆನಪುಗಳಿಗೆ ಸಂಬಂಧಿಸಿರದೆ, ರಾಷ್ಟ್ರನಿರ್ಮಾಣಕ್ಕೆ ಸಂಬಂಧಿಸಿದ ಸಲಹೆಗಳನ್ನು ಒಳಗೊಂಡಿವೆ. 18ನೆಯ ಅಧ್ಯಾಯದಲ್ಲಿ ಅಮೆರಿಕನ್ ನಾಗರಿಕರು ಉದ್ಯಮಶೀಲರೆಂದೂ, ಭಾರತದ ಜನಸಂಖ್ಯೆಯಲ್ಲಿನ ಹೆಚ್ಚು ಭಾಗ ಶಿಕ್ಷಣದಿಂದ ವಂಚಿತರಾಗಿ, ಪರಂಪರಾಗತ ಬದುಕಿನಲ್ಲೇ ತೃಪ್ತರಾಗಿ, ಉದ್ಯಮಶೀಲತೆಯನ್ನು ಕೈಬಿಟ್ಟಿದ್ದಾರೆಂದೂ ಬರೆಯುತ್ತಾರೆ. 188 ಪುಟಗಳ ಈ ಕೃತಿಯ ಬೆಲೆ 120 ರೂಪಾಯಿಗಳು. ‘ಅಂಕಿತ ಪುಸ್ತಕ’ ಪ್ರಕಟಿಸಿರುವ ಈ ಕೃತಿ 2011ರಲ್ಲಿ ನಾಲ್ಕನೆಯ ಮುದ್ರಣ ಕಂಡಿದೆ.
 -ತ. ನಂ. ಜ್ಞಾನೇಶ್ವರ

No comments:

Post a Comment