Saturday, November 28, 2015

ಕನಕದಾಸರು

ಕನಕದಾಸರು ಹದಿನಾರನೇ ಶತಮಾನದಲ್ಲಿ ಬದುಕಿದ್ದ ಕೀರ್ತನಕಾರ, ಕವಿ ಹಾಗೂ ಹರಿದಾಸರು. ಶೂದ್ರವರ್ಗದಿಂದ ಬಂದ ಏಕೈಕ ಹರಿದಾಸರು.  ವ್ಯಾಸರಾಯರ ಶಿಷ್ಯರಾಗಿದ್ದ ಅವರು ಸುಮಾರು ನಾಲ್ಕುನೂರು ಕೀರ್ತನೆಗಳನ್ನೂ, ಐದು ಕಾವ್ಯಗಳನ್ನೂ ರಚಿಸಿರುವರು. ಅವರ ಕೀರ್ತನೆಗಳ ಅಂಕಿತ 'ಕಾಗಿನೆಲೆಯಾದಿಕೇಶವರಾಯ'. ಅವರು ರಚಿಸಿರುವ ಕಾವ್ಯಗಳೆಂದರೆ:
  1. ನಳಚರಿತ್ರೆ
  2. ಮೋಹನತರಂಗಿಣಿ
  3. ರಾಮಧಾನ್ಯಚರಿತೆ
  4. ಹರಿಭಕ್ತಿಸಾರ
  5. ನೃಸಿಂಹಸ್ತವ
ನಳಚರಿತ್ರೆ
ನಳಚರಿತ್ರೆಯು ನಳ ದಮಯಂತಿಯರ ಕಥೆಯನ್ನು ಹೊಂದಿದೆ.
ಮೋಹನತರಂಗಿಣಿ
ಮೋಹನತರಂಗಿಣಿಯು ಶಂಬರಾಸುರ ಹಾಗೂ ಬಾಣಾಸುರರ ಕಥೆಯನ್ನು ಹೊಂದಿದೆ. ಎರಡು ಕಥೆಗಳನ್ನು ಒಂದೇ ಕಾವ್ಯದಲ್ಲಿ ಹೇಳಿರುವುದು ವಿಶೇಷ.
ರಾಮಧಾನ್ಯಚರಿತೆ
 ಜಗಳ ಮಾಡಿಕೊಂಡ ರಾಗಿ ಮತ್ತು ಅಕ್ಕಿ ನ್ಯಾಯಕ್ಕಾಗಿ ರಾಮನ ಬಳಿ ಬರುತ್ತವೆ. ರಾಮ ಇಬ್ಬರನ್ನೂ ಸೆರೆಗೆ ತಳ್ಳುತ್ತಾನೆ. ಸ್ವಲ್ಪ ಕಾಲದ ನಂತರ ರಾಗಿ ಆರೋಗ್ಯವಾಗಿದ್ದರೆ, ಅಕ್ಕಿ ಮುಗ್ಗಿರುತ್ತದೆ. ಆರೋಗ್ಯವಾಗಿದ್ದ ರಾಗಿ 'ರಾಮಧಾನ್ಯ' ಎನಿಸಿಕೊಳ್ಳುತ್ತದೆ. ಇಲ್ಲಿ ರಾಗಿ ಬಡವರ ಪ್ರತಿನಿಧಿಯಾಗಿಯೂ, ಅಕ್ಕಿ ಶ್ರೀಮಂತರ ಪ್ರತಿನಿಧಿಯಾಗಿಯೂ ಬಂದಿದೆ.
ಹರಿಭಕ್ತಿಸಾರ
ಇದೊಂದು ಶತಕ. 110 ಪದ್ಯಗಳಿವೆ. ಭಾಮಿನೀ ಷಟ್ಪದಿಯಲ್ಲಿರುವ ಈ ಪದ್ಯಗಳು 'ರಕ್ಷಿಸು ನಮ್ಮನನವರತ' ೆಂದು ಕೊನೆಗೊಳ್ಳುತ್ತವೆ.
ನೃಸಿಂಹಸ್ತವ
ಈ ಕೃತಿ ಉಪಲಬ್ಧವಿಲ್ಲ.
 ಕನಕದಾಸ ಜಯಂತಿ
ಕರ್ನಾಟಕ ಸರ್ಕಾರವು 2008ರಿಂದ 'ಕನಕದಾಸ ಜಯಂತಿ' ಆಚರಿಸುತ್ತಿದೆ.
ಪ್ರಶಸ್ತಿ
ಕರ್ನಾಟಕ ಸರ್ಕಾರವು ಪ್ರತಿವರ್ಷ 'ಕನಕಶ್ರೀ' ಪ್ರಶಸ್ತಿ ನೀಡುತ್ತಿದೆ.

No comments:

Post a Comment